ಶನಿವಾರ, ಮೇ 4, 2013

ಬನ್ನಿ.. ಮತದಾನ ಮಾಡೋಣ!!



 
ನೋಡ್ತಾ ನೋಡ್ತಾ ಇದ್ದ ಹಾಗೆ ಮತ್ತೊಮ್ಮೆ ಚುನಾವಣಾ ಎದುರು ಬಂದು ನಿಂತಿದೆ.   ಪ್ರತಿದಿನ ಪತ್ರಿಕೆಗಳಲ್ಲಿ ಚುನಾವಣಾ  ಪ್ರಕ್ರಿಯೆಯ ಬಿಸಿ ಬಿಸಿ ಸುದ್ದಿಗಳು, ಬೆಳಗಿನ ಚಹದೊಂದಿಗೆ ಚಪ್ಪರಿಸಲು  ಚುರುಮುರಿಯಷ್ಟೇ ರುಚಿಕರ !!   ಪಕ್ಷದ ಅಭ್ಯರ್ಥಿಯಾಗಲು  ಟಿಕೇಟು ಗಿಟ್ಟಿಸಲು ಹೋರಾಟ ,, ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರಾಟ ..!!! ಇವರೆಲ್ಲ ಆ ಪಕ್ಷದ ಸಿದ್ಧಾಂತಗಳಿಗೆ ಮೆಚ್ಚಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿದರೆ ನಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ ಎಂದೇ ಹೇಳಬೇಕು ಅಷ್ಟೇ ! ಅಂದ ಹಾಗೆ ಈಗಿನ ಪಕ್ಷಗಳಿಗೆ ತತ್ವ ಸಿದ್ದಾಂತ ಗಳಿವೆಯ ? ಎಂದು ಮಾತ್ರ ಕೇಳಬೇಡಿ!!


ಈ ಸಲದ ಚುನಾವಣಾ ನನಗೆ  ವಿಶೇಷ .. ಏಕೆಂದರೆ ಈದೆ ಪ್ರಥಮ ಬಾರಿಗೆ ನಾನು ವೋಟ್ ಹಾಕುವುದರ ಮೂಲಕ ನನ್ನ ನಾಗರೀಕ ಹಕ್ಕನ್ನು ಚಲಾಯಿಸುತ್ತಿದ್ದೇನೆ!! ಚಿಕ್ಕಂದಿನಲ್ಲಿ ತಂದೆ ತಾಯಿಯ ಉಗುರಿನ ಮೇಲಿನ ಶಾಯಿಯ ಕಲೆ ನೋಡಿ ನಾನು ವೋಟ್ ಹಾಕುತ್ತೇನೆ ಎಂದು ಹಠ ಮಾಡುತ್ತಿದ್ದೆ. ಅದರಂತೆ ಉಗುರಿನ ಮೇಲೆ ಪೆನ್ನಿನ ಶಾಯಿ ಬಳಿದು ವೋಟ್ ಹಾಕಿ ಬಂದವರಂತೆ ಬೀಗುತ್ತಿದ್ದೆ.. !! ಆಗೆಲ್ಲ ಚುನಾವಣೆ ಎಂದರೇನು ? ಯಾಕಾಗಿ ನಡೆಯುತ್ತದೆ ? ಏನೂ ಸರಿಯಾಗಿ ತಿಳಿದಿರಲಿಲ್ಲ .. ಮುಖ್ಯ ಮಂತ್ರಿ, ಪ್ರಧಾನ ಮಂತ್ರಿ ಎಂದರೆಲ್ಲ ಕೇವಲ ಬಾಯಿಪಾಠ ಹೇಳುವಾಗ ಮಾತ್ರ ನೆನಪಿಟ್ಟುಕೊಳ್ಳಬೇಕಾದಂಥವರು  ಎಂದಷ್ಟೇ ತಿಳಿದಿತ್ತು..!!


೨೦ ೦ ೮ ರ ಚುನಾವಣೆಯಲ್ಲಿ ಮುಂದಿನ ಸಲ ನಾನೂ ವೋಟ್ ಹಾಕಬಹುದು ಎಂದು ಸಿಕ್ಕಾಪಟ್ಟೆ ಗತ್ತಿನಿಂದ ಎಲ್ಲರ ಬಳಿಯೂ ಹೇಳಿಕೊಂಡು ಓಡಾಡಿದ್ದೆ .. ಆದರೆ ಅಂದು ಇದ್ದ ಉತ್ಸಾಹ,, ಹುಮ್ಮಸ್ಸು,, ಕುತೂಹಲ ಅರ್ಧರಷ್ಟೂ ಇಂದು ಉಳಿದಿಲ್ಲ ಎಂದು ಹೇಳಿಕೊಳ್ಳಲು ವಿಷಾದವೆನಿಸುತ್ತಿದೆ..


ಯಾಕೆ ಹೀಗಾಯ್ತು??
ಈ ಐದು ವರ್ಷಗಳ ಕಾಲ ಕರ್ನಾಟಕ ಸರ್ಕಾರದ ಏಳು ಬೀಳುಗಳನ್ನು ಕಂಡವರು ಈ ಪ್ರಶ್ನೆ ಕೇಳಲಿಕ್ಕಿಲ್ಲವೇನೋ ...!! ಈ ಐದು ವರ್ಷಗಳಲ್ಲಿ ಕರ್ನಾಟಕ ಕಂಡಿದ್ದು ೩ ಮುಖ್ಯ ಮಂತ್ರಿಗಳನ್ನು !!
ನಮ್ಮ ಬೇರೆ ರಾಜ್ಯಗಳ ಗೆಳತಿಯರು ಯಡಿಯೂರಪ್ಪನ ಹೆಸರು ಗಟ್ಟು  ಹೊಡೆಯುವುದರೋಳಗಾಗಿ ಸದಾನಂದ ಗೌಡ ಬಂದಿದ್ದಾಯ್ತು .. ನಂತರ ಕೆಲವೇ ತಿಂಗಳಲ್ಲಿ ಜಗದೀಶ್ ಶೆಟ್ಟ ರ್ ..!! ಒಳ್ಳೆ ಖೊಖೊ ಆಡ್ತಾ ಇದಾರೆನೋ ಎಂಬಂತೆ .. !!


 ಭವಿಷ್ಯದ ಭವ್ಯ ಭಾರತದ ರೂವಾರಿಗಳಾದ ನಾವುಗಳೇ ಈ ವ್ಯವಸ್ಥೆ ಯಿಂದ ರೋಸಿ ಹೋಗಿದ್ದೆವೆ.. ನಾವೇ  ಈ ಥರದ ಮನೋಭಾವ ಹೊಂದಿದರೆ ದೇಶದ ಮುಂದಿನ ಗತಿ ಏನಾಗಬಹುದು???

 ನಮ್ಮ ಮನಸ್ಥಿತಿ ಬದಲಾಗಲು ಕಾರಣವನ್ನು ನಾವು ಸುಲಭವಾಗಿ ಬೇರೆಯವರ ಮೇಲೆ ಹೊರಿಸಬಹುದು.. ಇದರಲ್ಲಿಯೂ ನಾವು ನಮ್ಮ ರಾಜಕಾರಣಿಗಳನ್ನು ಅನುಸರಿಸಿದಂತಾಗುತ್ತದೆಯೇ ಹೊರತು ಯಾವುದೇ ಉತ್ತರವನ್ನು ಪಡೆಯಲಾಗುವುದಿಲ್ಲ..


ಹಾಗಿದ್ದಲ್ಲಿ ತಪ್ಪು ಯಾರದ್ದು???

ಈ ತೆರನಾದ (ಅ)ವ್ಯವಸ್ಥೆಗೆ ಒಬ್ಬರನ್ನು ಅಥವಾ ಇಬ್ಬರನ್ನು ದೂಷಿಸಿ ಪ್ರಯೋಜನವಿಲ್ಲ... ತಪ್ಪು ನಮ್ಮಲ್ಲೇ ಇದೆ...

ಸುಲಭವಾಗಿ ಸಿಕ್ಕಿದ್ದಕ್ಕೆ ಕೈ ಚಾಚುವ ನಮ್ಮ ಮನೋಭಾವದಲ್ಲಿದೆ...
ದುಡ್ಡಿಗಾಸೆಗಾಗಿ  ಬಾಯ್ಬಿಡುವ ಹೆಣದಂತೆ ಆಡುವ ನಮ್ಮ ವ್ಯಕ್ತಿತ್ವದಲ್ಲಿದೆ.. 
ಹತ್ತರೊಳಗೆ ಹನ್ನೊಂದು ಎಂದುಕೊಂಡು ನಮ್ಮ ಸ್ವಂತಿಕೆ ಕಳೆದುಕೊಳ್ಳುವ ಹೇಡಿತನದಲ್ಲಿದೆ..

ಇದೆಲ್ಲ ಬರಿ ಬರೆಯಲಿಕ್ಕೆ ಚೆಂದ .. ವಾಸ್ತವಕ್ಕೆ ಇಳಿದರೆ ಅದರ ಆಳ ತಿಳಿಯುತ್ತದೆ ಎಂದು ನೀವು ಮೂಗು ಮುರಿದರೆ ನಾನು ಅದಕ್ಕೆ ಸಮ್ಮತಿಸುತ್ತೇನೆ.

ಹೌದು .. ನೀವು ಹೇಳಿದ್ದು ಸರಿ..
ಸ್ವಾತಂತ್ರ್ಯ ಸಿಕ್ಕು ೬೬  ವರ್ಷಗಳಾದರೂ ನಾವಿನ್ನು ಅಭಿವ್ರದ್ಧಿ ಹೊಂದುತ್ತಲೇ ಇದ್ದೇವೆ .. ನಮ್ಮಲ್ಲಿ ಏನು ಕಡಿಮೆ???
ಫಲವತ್ತಾದ ಭೂಮಿ ,!! ನಿತ್ಯ ಹರಿದ್ವರ್ಣದ ಕಾಡುಗಳು ..!!  ಚಿನ್ನ ,, ಕಬ್ಬಿಣ ,,ಮ್ಯಾಂಗನೀಸ್ ಇತ್ಯಾದಿ ಅದಿರುಗಳುಳ್ಳ ನೆಲ.... !!

ಎಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನ ಅತಿ ಬುದ್ದಿವಂತ ಪ್ರಾಣಿ ನಮ್ಮ ದೇಶದಲ್ಲೇ ಪ್ರತಿವರ್ಷ ಕೋಟಿಗಟ್ಟಲೆ ಹುಟ್ಟುತ್ತಿವೆ ... ಈ ಅತಿ ಬುದ್ಧಿವಂತ ಪ್ರಾಣಿ ತನ್ನ ಬುದ್ದಿಯನ್ನು ಉಪಯೋಗಿಸದೆ ತನ್ನನ್ನು ತಾನು ಹೊರೆ ಎಂದು ಭಾವಿಸಿ ಕೊಳ್ಳುತ್ತಿದೆ ..!!

ಎಲ್ಲವನ್ನು ಹೊಂದಿರುವ ನಾವು ಏನು ಇಲ್ಲದಿರುವವರ ಥರ ನಮ್ಮ ದೇಶವನ್ನು ಚೀನಾ ಅಮೆರಿಕಕ್ಕೆ ಹೋಲಿಸಿ ಮರುಗುತ್ತೇವೆ... 
ನಮ್ಮನ್ನು ನಾವೇ ತುಚ್ಚವಾಗಿ ಕಂಡರೆ ಬೇರೆಯವರು ಏನೆಂದು ಯೋಚಿಸಬಹುದು ??? ಸ್ವಲ್ಪ ಯೊಚಿಸಿ.....
"ಭಾರತೀಯರಿಗೆ ಕೇವಲ ಆಳಿಸಿ ಕೊಂಡು  ಅಭ್ಯಾಸ .. ಆಳಲು ಅವರು ಅರ್ಹರಲ್ಲ .." ಎಂದು ವದರಿ ಹೋದ ಆಂಗ್ಲರಿಗೆ ನಾವು ಎದುರೇಟು ಕೊಡಬೇಕು ತಾನೇ???


ಹೌದು ... ನಮ್ಮೆಲ್ಲರ ಮನಸಿನಲ್ಲಿ ಇರುವುದೂ ಅದೆ... ! ಬ್ರಷ್ಟಾಚಾರ ಮುಕ್ತ ಪ್ರಜಾಸ್ನೇಹಿ ಸರ್ಕಾರ ...
ಅದನ್ನು ವಾಸ್ತವ ಮಾಡಲು ಇರುವ ಒಂದು ಅವಕಾಶವೆಂದರೆ ಚುನಾವಣೆ !!


ಎಲ್ಲರು ಒಟ್ಟಾಗಿ ಇದ್ದುದರಲ್ಲಿ ಕಡಿಮೆ ಬ್ರಷ್ಟ ಅಭ್ಯರ್ಥಿಗೆ ವೋಟ್ ಹಾಕಿ ಎಂದರೆ ಅದೂ  ತಪ್ಪಾಗುತ್ತದೆ...  ಅದೇ ಕಡಿಮೆ ಬ್ರಷ್ಟ ಅಭ್ಯರ್ಥಿ ಅಧಿಕಾರಕ್ಕೆ ಬಂಡ ನಂತರ ಉಳಿದ ಕುಳಗಳಿಗಿಂತ ದೊಡ್ಡ ಕುಳವಾಗಿ ಬಿಡುತ್ತಾನೆ ಎಂದು ನಾವು ನಮ್ಮ ಹಿಂದಿನ ತಪ್ಪಿನಿಂದ ಪಾಠ ಕಲಿತಿದ್ದೆವೆ... !!


ಹಾಗಾದರೆ ತಾತ್ಪರ್ಯ ಏನು???
ವೋಟ್ ಮಾಡಬೇಕಾದದ್ದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ... ಕರ್ತವ್ಯಕ್ಕಿಂತ ಹೆಚ್ಚಾಗಿ ಅದು ಅವರ ಹಕ್ಕು... ತಪ್ಪು ಮಾಡಿದವರಿಗೆ ಶಿಕ್ಷೆ ಯಾಗಲೇ ಬೇಕು.. ಅದು ಈಗ ಮತದಾರರ ಕೈಯಲ್ಲಿದೆ... ನಾವು ಬಯಸುತ್ತಿರುವುದು ಒಬ್ಬ ವಿದ್ಯಾವಂತ ದಕ್ಷ ನಾಯಕರನ್ನು... ಅಂಥವರು ಭಾರತವನ್ನು ಮುನ್ನೆಡೆಸಲು ಮುಂದಾಗುವ ತನಕ ನಾವು ಆಶಾವಾದಿಗಳಾಗಿರೋಣ ... 
ಹಾಗಿದ್ದರೆ ಎಲ್ಲರೂ ನಾಳೆ ವೋಟ್ ಹಾಕ್ತೀರಾ ಅಲ್ವ????